Showing posts with label ಕನ್ನಡ. Show all posts
Showing posts with label ಕನ್ನಡ. Show all posts

Friday, December 30, 2011

೨೦೧೧ ರ ನನ್ನ ಹಿನ್ನೋಟ



ನಮಸ್ಕಾರ ಸ್ನೇಹಿತರೇ, ಬಹಳ ದಿನಗಳ ನಂತರ ಮತ್ತೆ ಇಲ್ಲಿ ಬರೆಯುತ್ತಿದ್ದೇನೆ. ಇದು ೨೦೧೧ ರ ನನ್ನ ಕೊನೆಯ ಬರಹ! ಎಷ್ಟು ಬೇಗ ೨೦೧೧ ಕಳೆದು ಹೋಯಿತು? ಕಾಲಗರ್ಬದಲ್ಲಿ ಸದ್ದಿಲ್ಲದೇ ಸೇರಿ ಹೋಗುತ್ತಿರುವ ಈ ವರ್ಷಕ್ಕೆ ನಮ್ಮದೂ ಒಂದು ವಿದಾಯ ಹೇಳಬೇಕಲ್ಲವೇ? ಅದಕ್ಕೆ ಮುಂಚೆ ನನ್ನ ಜೀವನದಲ್ಲಿ ಈ ವರ್ಷ ನಡೆದ ಕೆಲವು ಘಟನೆಗಳನ್ನು ಮೆಲುಕು ಹಾಕುವ ಸಣ್ಣ ಪ್ರಯತ್ನ ಇಲ್ಲಿ ಮಾಡಿದ್ದೇನೆ.

೨೦೧೦ ರ ಡಿಸೆಂಬರ್‌ನಲ್ಲಿ ನಾನು ಮಾಡುತ್ತಿದ್ದ ಮೆಡಿಕಲ್ ಟ್ರಾನ್ಸ್ಕ್ರಿಪ್ಷನ್ ಕೆಲಸಕ್ಕೆ ಗುಡ್‌ಬೈ ಹೇಳಿಬಿಟ್ಟೆ! ಮುಂದೇನು ಎನ್ನುವ ಯೋಚನೆಗೆ ಆಸ್ಪದವಿಲ್ಲದಂತೆ ಈಸ್ಪೀಕ್ ತಂತ್ರಾಂಶದಲ್ಲಿ ಕನ್ನಡ ಸೇರಿಸಲು ಕೆಲಸ ಮಾಡುವ ಅವಕಾಶ ಸಿಕ್ಕಿತು. ೨೦೧೧ ರ ಆರಂಭದಲ್ಲಿ ಬರಹದಲ್ಲಿ ಕನ್ನಡ ಬೆರಳಚ್ಚು ಮಾಡುವುದನ್ನು ಕಲಿಯಲು ಪ್ರಾರಂಭಿಸಿದೆ. ಇದಕ್ಕೆ ನನ್ನ ತಂದೆಯವರು ಸಹಾಯ ಮಾಡಿದರು. ಈ ಮಧ್ಯೆ, ನನಗೆ ಕರ್ನಾಟಕ ಸರಕಾರ ಹಾಗು ಕೆಲವು ಎನ್‌ಜೀಓ ಗಳು ಸೇರಿ ಜನವರಿಯಲ್ಲಿ ನಡೆಸಿದ ಐಟೀ ಫಾರ್ ದಿ ಡಿಸೇಬಲ್ಡ್ ವಿಚಾರ ಘೋಷ್ಟಿಯಲ್ಲಿ ಭಾಗವಹಿಸುವ ಅವಕಾಶ ತಮಿಳುನಾಡಿನ ನನ್ನ ಸ್ನೇಹಿತರಿಂದ ಸಿಕ್ಕಿತು. ಅಲ್ಲಿ ಅನೇಕ ವ್ಯಕ್ತಿಗಳ ಪರಿಚಯವಾಯಿತು. ಆ ಎಲ್ಲಾ ಕಥೆಯನ್ನು ನಿಮಗೆ ಹೇಳುತ್ತಾ ಕುಳಿತರೆ ಒಂದು ಸಣ್ಣ ಕಿರುಹೊತ್ತಿಗೆಯನ್ನೇ ಬರೆಯಬಹುದು! ಇರಲಿ, ಅದರಿಂದ ನನ್ನ ಸ್ನೇಹಿತ ವರ್ಗ, ಹಾಗು ನನ್ನ ತಿಳುವಳಿಕೆ ಹೆಚ್ಚಾಯಿತು ಎನ್ನುವುದು ಮಾತ್ರ ಸತ್ಯ. ಈ ಸಮಯದಲ್ಲಿ ನನಗೆ ತಮಿಳುನಾಡಿನ ತರ್ಡ್‌ ಐ ಟೆಕ್ನಿಕಲ್ ವಾಲೆಂಟರಿ ಗ್ರೂಪಿನ ಬಗೆಗೆ ತಿಳಿಯಿತು. ಅದಾದ ನಂತರ ಜನವರಿ ಅಂತ್ಯದಲ್ಲಿ ನನ್ನ ಬಗ್ಗೆ ಹಾಗೂ ಈಸ್ಪೀಕ್ ಕನ್ನಡದ ಬಗ್ಗೆ ಅಬಸಿ ಶ್ರೀನಾಥ್ (ನನ್ನ ತಂದೆ) ಬರೆದ ಲೇಖನವೊಂದು ದಟ್ಸ್‌ಕನ್ನಡ ಪೋರ್ಟಲ್‌ನಲ್ಲಿ ಪ್ರಖಟವಾಯಿತು. ಅಲ್ಲಿಂದ ನನ್ನ ಸ್ನೇಹಿತ ವರ್ಗ ಮತ್ತೂ ದೊಡ್ಡದಾಯಿತು ಕೆಲ ಗೆಳೆಯರ ವತ್ತಾಯದ ಮೇರೆಗೆ ನಾನೂ ಫೇಸ್‌ಬುಕ್‌ಗೆ ಬಂದೆ! ಅದುವರೆಗೆ ಕೇವಲ ಆರ್ಕುಟ್ ಬಳಸುತ್ತಿದ್ದೆ. ನನ್ನ ತಮ್ಮ ವಿನಾಯಕನ ನೆರವಿನಿಂದ ಫೇಸ್‌ಬುಕ್ಕಿನ ಕೆಲವು ಫೀಚರುಗಳನ್ನು ತಿಳಿದುಕೊಂಡೆ. ಅದಾದನಂತರ ಮಾರ್ಚಿನಲ್ಲಿ ನನ್ನ ಬಗ್ಗೆ ಹಾಗು ಕನ್ನಡ ಈಸ್ಪೀಕ್‌ನ ಬಗ್ಗೆ ನನ್ನ ಬ್ಲಾಗಿನಲ್ಲಿ ನಾನೇ ಬರೆದುಕೊಂಡೆ! ಈ ಸಮಯದಲ್ಲಿಯೇ ಕನ್ನಡಕ್ಕಾಗಿ ಕೆಲಸಮಾಡುತ್ತಿರುವ ಡಾ|| ಪವನಜ ಅವರ ಪರಿಚಯ ಅನಿರೀಕ್ಷಿತವಾಗಿ ಫೋನಿನಲ್ಲಾಯಿತು. ಅದಾದ ನಂತರ ಪೂರ್ಣಪ್ರಜ್ಞ ಬೇಳೂರು ಅವರು ನಮ್ಮ ಮನೆಗೆ ಕೆಲವು ಪತ್ರಕರ್ತರನ್ನು ಕರೆತಂದರು. ಅವರು ನನ್ನ ಸಂದರ್ಶನ ಪಡೆದರು. ನನ್ನ ಕುರಿತಾಗಿ ಪ್ರಜಾವಾಣಿ, ಹೊಸದಿಗಂತ, ಕನ್ನಡಪ್ರಭ, ಡೆಕ್ಕನ್ ಹೆರಾಲ್ಡ್‌ ಪತ್ರಿಕೆಗಳಲ್ಲಿ ಲೇಖನಗಳು ಬಂದವು. ಇದಾದ ನಂತರ ನನ್ನ ಸ್ನೇಹಿತ ವರ್ಗ ಇನ್ನೂ ಹೆಚ್ಚಾಯಿತು. ಪೂರ್ಣಪ್ರಜ್ಞ ಅವರು ಬೇಳೂರು ಸುದರ್ಶನ ಅವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಸುದರ್ಶನ ಅವರು ಆ ಸಮಯದಲ್ಲಿ ಕರ್ನಾಟಕ ಜ್ಞಾನ ಆಯೋಗದ ಕಣಜ ಜಾಲತಾಣದ ಸಮನ್ವಯಕಾರರಾಗಿದ್ದರು. ಅವರು ಈಸ್ಪೀಕ್ ಕನ್ನಡ ಆವೃತ್ತಿಯನ್ನು ಕಣಜ ಜಾಲತಾಣದಲ್ಲಿ ಸೇರಿಸಿಕೊಂಡರು. ಈ ಮಧ್ಯೆ, ಸಾಗರದ ಸರಕಾರಿ ನೌಕರರ ಸಂಘದ ಅಧ್ಯಕ್ಶರಾಗಿರುವ ಮಾಸಾ ನಂಜುಂಡಸ್ವಾಮಿಯವರು ನನಗೆ ಪರಿಚಯವಾದರು. ಅವರು ಸರಕಾರಿ ನೌಕರರ ಸಂಘ ಏಪ್ರಿಲ್ ನಲ್ಲಿ ಸಾಗರದಲ್ಲಿ ನಡೆಸಿದ ‘ಪೀಯೂಸಿ ನಂತರ ಮುಂದೇನು’ ಪಿಯೂಸೀ ವಿದ್ಯಾರ್ಥಿಗಳಿಗೆ ನಡೆಸಿದ ಒಂದು ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ ನನ್ನಿಂದಲೇ ಆ ಕಾರ್ಯಕ್ರಮದ ಉದ್ಘಾಟನೆ ಮಾಡಿಸಿದರು. ಇದೇ ಸಮಯದಲ್ಲಿ ನಮ್ಮೂರಿನವರೇ ಆದ ದಿನೇಶ್ ಜೋಷಿ ಅವರ ಒಡನಾಟಕ್ಕೆ ಬಂದೆ. ಶಿವಮೊಗ್ಗದ ಪ್ರೊಫೆಸರ್ ಶಾಸ್ತ್ರೀ ಅವರ ಪರಿಚಯವಾಯಿತು. ಇದಕ್ಕೂ ಮುನ್ನ ತಮಿಳುನಾಡಿನಲ್ಲಿರುವ ತರ್ಡ್ ಐ ಟೆಕ್ನಿಕಲ್ ವಾಲೆಂಟರೀ ಗ್ರೂಪಿನ ಕಾರ್ಯದರ್ಶಿ ಅವರ ಮನೆಗೆ ಹೋಗಿದ್ದೆ. ಅವರು ನನಗೆ ತರ್ಡ್ ಐ ಪರವಾಗಿ ಒಂದು ಜಿಪೀಎಸ್ ಸಾಧನವನ್ನು ಉಡುಗೊರೆಯಾಗಿಕೊಟ್ಟರು. ಹವ್ಯಕ ಸಾಗರ ಸಂಸ್ಥೆಯವರು ಜೂನ್ ತಿಂಗಳಿನಲ್ಲಿ ಅವರ ಒಂದು ಕಾರ್ಯಕ್ರಮದಲ್ಲಿ ನನಗೆ ಸನ್ಮಾನ ಮಾಡಿದರು. ಇದಾದ ನಂತರ ಜುಲೈ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ ವಿಪ್ರ ನೌಕರರ ಸಂಘದ ಒಂದು ಕಾರ್ಯಕ್ರಮವನ್ನು ನಂಜುಂಡಸ್ವಾಮಿಯವರು ನನ್ನಿಂದಲೇ ಉದ್ಘಾಟನೆ ಮಾಡಿಸಿದರು. ಕಣಜ ಯೋಜನೆಯವರು ಅದೇ ತಿಂಗಳಿನಲ್ಲಿ ಕನ್ನಡ ಈಸ್ಪೀಕ್ ತಂತ್ರಾಂಶಕ್ಕಾಗಿ ನಾನು ಮಾಡಿದ ಕೆಲಸಕ್ಕೆ ಒಂದು ಪ್ರಮಾಣಪತ್ರವನ್ನು ನೀಡಿದರು. ಇದಾದ ನಂತರ ಸುದರ್ಶನ ಅವರು ಕಣಜ ಯೋಜನೆಯ ಪರವಾಗಿ ನನ್ನನ್ನು ಸಮರ್ಥನಾಮ್ ಎಂಬ ಎನ್‌ಜೀಒ ದಲ್ಲಿ ಕನ್ನಡ ತಂತ್ರಾಂಶವನ್ನು ತೋರಿಸಲು ಕರೆದುಕೊಂಡು ಹೋಗಿದ್ದರು. ಇದೇ ತಿಂಗಳಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಅವರು ತಯಾರಿಸುತ್ತಿರುವ ಒಂದು ಕನ್ನಡ ತಂತ್ರಾಂಶದ ಪರೀಕ್ಷೆಗಾಗಿ ನನ್ನನ್ನು ಸುಮಾರು ಒಂದು ತಿಂಗಳುಗಳ ಕಾಲ ಕರೆಸಿಕೊಂಡರು. ಅಗಷ್ಟ್ ತಿಂಗಳಿನಲ್ಲಿ ಸೊರಬದಲ್ಲಿ ನಡೆದ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಒಂದು ಸನ್ಮಾನ ಮಾಡಿದರು. ಇದಕ್ಕಾಗಿ ನಾನು ಸೊರಬ ತಾಲ್ಲೂಕು ಸಾಹಿತ್ಯ ಪರಿಶತ್ತೂ, ಶಾಸಕ ಹಾಲಪ್ಪನವರು, ಹಾಗು ಪತ್ರಕರ್ತ ಮಿತ್ರರಾದ ಉಮೇಶ್ ಬಿಚ್ಚುಗತ್ತಿ, ಶ್ರೀಪಾದ ಬಿಚ್ಚುಗತ್ತಿ, ಹಾಗು ದಿನಕರ ಭಟ್ ಭಾವೆ, ಮತ್ತಿತರರಿಗೆ ಕೃತಜ್ಞ. ಬೇಳೂರು ಸುದರ್ಷನ ಅವರ ಜೊತೆ ಟಿವಿ೯ ರಲ್ಲಿ ‘ಕನ್ನಡ ದ ಕಣಜ’ ಎಂಬ ಒಂದು ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಇದರ ಜೊತೆಗೆ ಕನ್ನಡ ಓಸೀಆರ್ ತಂತ್ರಾಂಶ ತಯಾರಿಸುತ್ತಿರುವ ಮೈಸೂರಿನ ಪ್ರೊಫೆಸರ್ ಯೋಗಾನಂದ ಅವರನ್ನು ಸುದರ್ಶನ ಅವರು ಪರಿಚಯಿಸಿದರು. ಮೈಸೂರಿನಲ್ಲಿ ಡಾ|| ಪವನಜ ಅವರನ್ನು ಬೇಟಿಯಾಗುವ ಅವಕಾಶ ಸಿಕ್ಕಿತು. ಸಿದ್ಧಾಪುರದ ನನ್ನ ಹಳೆಯ ಶಾಲೆಯ ಸ್ಥಾಪಕರು ನನ್ನನ್ನು ಕರೆದು ನನಗೆ ಸನ್ಮಾನಿಸಿದರು. ಒಬ್ಬ ವ್ಯಕ್ತಿಗೆ ತಾನು ಓದಿದ ಹಳೆಯ ಶಾಲೆಯವರು ತನ್ನನ್ನು ಗುರುತಿಸುವುದಕ್ಕಿಂತಾ ದೊಡ್ಡ ಸೌಭಾಗ್ಯ ಇನ್ನೇನಿದೆ?!

ಇದೆಲ್ಲಾ ನಡೆಯುತ್ತಿರುವಂತೆ ಕಂಪ್ಯೂಟರಿನಲ್ಲಿ ಹೆಚ್ಚಿನದನ್ನು ಕಲಿಯ ಬೇಕೆಂಬ ನನ್ನ ಆಸಕ್ತಿ ಹೆಚ್ಚಾಯಿತು. ಕಂಪ್ಯೂಟರ್ ಪ್ರೋಗ್ರಾಮಿಂಗ್ ಲಾಂಗ್ವೇಜ್ (c c++ java) ಸರಿಯಾಗಿ ಕಲಿಯಲು ಪ್ರಯತ್ನ ಆರಂಭಿಸಿದೆ. ಈ ಸಮಯದಲ್ಲಿ ನನ್ನ ಸೋದರ ಮಾವ (ಸಂದೇಶ್) ಅವರು ಕೆಲವರನ್ನು ಬೇಟಿ ಮಾಡಿ ನನಗೆ ಅವಕಾಶವನ್ನು ಒದಗಿಸಿಕೊಟ್ಟರು. ಬೆಂಗಳೂರಿನ ಅವರ ಮನೆಯಲ್ಲಿಯೇ ನನಗೆ ಆಶ್ರಯ ಕೊಟ್ಟು ನನ್ನ ಕಂಪ್ಯೂಟರ್ ತರಗತಿಗಳಿಗೆ ಹೋಗಿ ಬರಲು ಅನುಕೂಲ ಮಾಡಿ ಕೊಟ್ಟಿದ್ದಾರೆ. ಅವರಿಗೆ ನಾನು ಚಿರಋಣಿ.

ಡಿಸೆಂಬರ್ ತಿಂಗಳಿನಲ್ಲಿ ಸಾಗರದ ಬಳಿಯ ಹೊಂಗಿರಣ ಶಾಲೆಯ ವಾರ್ಷಿಕೋತ್ಸವದ ವಿಜ್ಞಾನೋತ್ಸವದ ಸಮಾರೋಪ ಸಮಾರಂಭಕ್ಕೆ ನನ್ನನ್ನು ಮುಖ್ಯ ಅತಿಥಿಯನ್ನಾಗಿ ಕರೆದಿದ್ದರು. ಇದಕ್ಕೆ ಕಾರಣ ಪೂರ್ಣಪ್ರಜ್ಞ ಬೇಳೂರುಅವರು. ಬೇಳೂರು ಸುದರ್ಶನ ಹಾಗು ಪೂರ್ಣಪ್ರಜ್ಞ ಬೇಳೂರು ಅವರುಗಳ ವೊತ್ತಾಯದ ಮೇರೆಗೆ ಡಾಕ್ಟ್ರ್ ಬಾತ್ರಾಸ್ ಪಾಸಿಟಿವ್ ಹೆಲ್ತ್ ಅವಾರ್ಡ್‌ಗೆ ಅರ್ಜಿ ಹಾಕಿದೆ. ಡಿಸೆಂಬರ್ ತಿಂಗಳಿನಲ್ಲಿ ಆ ಅವಾರ್ಡ್ ನನಗೆ ಸಿಕ್ಕಿತು.

ಈ ಲೇಖನದಲ್ಲಿ ನನಗೆ ಪ್ರೀತಿ ತೋರಿಸಿದ ಎಲ್ಲಾ ಸ್ನೇಹಿತರ/ಹಿರಿಯರ ಹೆಸರು ಹಾಕಲು ಸಾಧ್ಯವಾಗಿಲ್ಲ. ಅವರೆಲ್ಲರನ್ನೂ ಅದಕ್ಕಾಗಿ ಕ್ಷಮೆ ಕೇಳುತ್ತೇನೆ.

ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ, ನನಗೆ ವಿದ್ಯಾ ದಾನ ಮಾಡಿದ ಎಲ್ಲಾ ಗುರುಗಳಿಗೂ, ನನ್ನ ತಂದೆ-ತಾಯಿಯರಿಗೂ, ನನ್ನ ಮನೆಯ ಎಲ್ಲರಿಗೂ, ನನ್ನ ಸೋದರಮಾವ ಸಂದೇಶ್ ಅವರಿಗೂ, ನಿಮ್ಮೆಲ್ಲರಿಗೂ ಈ ಸಂದರ್ಬದಲ್ಲಿ ವಂದಿಸಬಯಸುತ್ತೇನೆ.

೨೦೧೧ ನನ್ನ ಪಾಲಿಗಂತೂ ಒಂದು ಮರೆಯಲಾಗದ ವರ್ಷ. ಈ ಲೇಖನವನ್ನು ಮುಗಿಸುವ ಮುನ್ನ ೨೦೧೧ ವರ್ಷಕ್ಕೆ ನನ್ನ ಅಂತಿಮ ನಮನ. ಹೊಸ ವರ್ಷ ೨೦೧೨ ನಮ್ಎಲ್ಲರ ಬಾಳಿಗೂ ಹರುಷದ ಸುಧೆ ಹರಿಸಲಿ ಎಂದು ಆಶಿಸುತ್ತೇನೆ.

Saturday, August 6, 2011

ಸಿರಿ ನುಡಿ "ಈ" ಕನ್ನಡ ನುಡಿ

"ಸಿರಿನುಡಿ" ಇದೊಂದು ಕನ್ನಡ ಅಂತರಜಾಲ ತಾಣ ಇಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಭಂದ ಪಟ್ಟ ಅನೇಕ ಮಾಹಿತಿಗಳು ಸಿಗುತ್ತವೆ. ಇಲ್ಲಿನ ಲೇಖನ ಗಳನ್ನು 'DJVU' ಫಾರ್‌ಮ್ಯಾಟಿನಲ್ಲಿ ನೀಡಿದ್ದಾರೆ. ಸಹೃದಯೀ ಕನ್ನಡ ಸಾಹಿತ್ಯಾಸಕ್ತರು ತಮ್ಮ ಪುಸ್ತಕ ಓದುವಂತೆಯೇ ಇಲ್ಲಿನ ಲೇಖನಗಳನ್ನು ಓದಬಹುದು. ಬಹಳ ಮುಖ್ಯ ಸಂಗತಿ ಎಂದರೆ ಇಲ್ಲಿನ ಲೇಖನಗಳು ಯುನಿಕೋಡ್‌ನಲ್ಲೂ ಲಭ್ಯವಿದೆ. ಇದನ್ನು ಕನ್ನಡ "ಟೆಕ್ಸ್‌ಟ್ ಟು ಸ್ಪೀಚ್" (Text To Speech) ಅನ್ನು ಬಳಸಿ ಕಣ್ಣು ಕಾಣದವರೂ, ಅನಕ್ಷರಸ್ತರೂ ಸಹಾ ಓದಬಹುದಾಗಿದೆ. ಇಲ್ಲಿ ಅನೇಕ ವಿಚಾರಗಳ ಕುರಿತು ಲೇಖನಗಳಿವೆ. ಮುಖ್ಯವಾಗಿ ಹೇಳುವುದಾದರೆ, ಪ್ರಜಾವಾಣಿಯ ಹಳತು-ಹೊನ್ನು ಅಂಕಣದಲ್ಲಿ ಪರಿಚಯಿಸಲ್ಪಟ್ಟ ಪುಸ್ತಕಗಳು, ಅವಧೂತ ಶ್ರೇಷ್ಠರಾದ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ ಗುರು ಮಹಾರಾಜರ ಸಂದೇಶೋಪದೇಶ ಸಾಹಸ್ರಿ ಗ್ರಂಥ ಧ್ಯಾನ ಮಿಂಚು, ಡಾ.ಹೆಚ್.ರಾಮಚಂದ್ರಸ್ವಾಮಿರವರ ಮಹಾಭಾರತಕಥಾಸಂಗ್ರಹ, All India Magazine ಮಾಸ ಪತ್ರಿಕೆಯ ಕನ್ನಡ ಅನುವಾದ ಅಖಿಲ ಭಾರತದ ಪತ್ರಿಕೆ, ಅನುಪಮಾ ನಿರಂಜನರವರ ದಿನಕ್ಕೊಂದು ಕಥೆ, ಗೋಪಾಲಕೃಷ್ಣ ಅಡಿಗರು ಆರಂಭಿಸಿ ಬೆಳೆಸಿದ ಸಾಕ್ಷಿ ಪತ್ರಿಕೆಯ ಎಲ್ಲಾ ಸಂಚಿಕೆಗಳು, ಇತ್ಯಾದಿ. ಹೀಗೆ ಹತ್ತು ಹಲವು ಲೇಖನ/ಮಾಹಿತಿ ತುಂಬಿದ ಜಾಲತಾಣ ಸಿರಿನುಡಿ. ಅಂದರೆ "ಈ ಕನ್ನಡ" ವನ್ನು ಬೆಳಸುತತ್ತಿರುವ ಸಿರಿನುಡಿ.

ಇಷ್ಟೆಲ್ಲಾ ಹೇಳಿದ ಮೇಲೆ "ಇಲ್ಲಿ ನಂಗೇನಿಷ್ಟ" ಅಂತ ನಾನೇ ಹೇಳಬೇಕಲ್ಲವೇ? ಹೇಳುತ್ತೇನೆ. ಆದರೆ ಅದರ ಜೊತೆ ನೀವೂ ಸಿರಿನುಡಿ ಜಾಲತಾಣವನ್ನು ಸಂದರ್ಶಿಸಿ ಅಲ್ಲಿ ನಿಮಗೇನಿಷ್ಟ ಅಂತ ದಯವಿಟ್ಟು ನಂಗೂ ಹೇಳಿ!

ಇಲ್ಲಿ ನನಗೆ ಅತ್ಯಂತ ಇಷ್ಟವಾದ ಲೆಖನ/ಪುಸ್ತಕ: ಡಾ.ಹೆಚ್.ರಾಮಚಂದ್ರಸ್ವಾಮಿರವರ ಮಹಾಭಾರತಕಥಾಸಂಗ್ರಹ.
ನಾನು ಇಲ್ಲಿ ನಿರಂತರವಾಗಿ ಓದ ಬಯಸುವ ಇನ್ನೊಂದು ವಿಭಾಗವೆಂದರೆ ಅನುಪಮಾ ನಿರಂಜನರವರ ದಿನಕ್ಕೊಂದು ಕಥೆ.
ಮಾಹಿತಿಯನ್ನು ನೀಡುವ ಮೂಲಕ ಮನಸೂರೆ ಮಾಡಿರುವ ಇನ್ನೊಂದು ಪ್ರಮುಖವಿಭಾಗವೆಂದರೆ 1918 ರಲ್ಲಿ ಪ್ರಕಟವಾದ ವಿಜ್ಞಾನ ಮಾಸಪತ್ರಿಕೆ, ಸಂಪಾದಕರು: ಬೆಳ್ಳಾವೆ ವೆಂಕಟನಾರಾಣಪ್ಪನವರು ಮತ್ತು ಎನ್. ವೆಂಕಟೇಶಯ್ಯಂಗಾರ್ಯರು.

ಇದೆಲ್ಲಕ್ಕೂ ಮಿಗಿಲಾಗಿ ಇಲ್ಲಿನ ಲೇಖನಗಳಲ್ಲಿ ಪದಗಳನ್ನು ಹುಡುಕಲು ಓಸೀಆರ್ ತಂತ್ರಜ್ಞಾನದ ಸಹಾಯವೂ ದೊರೆಯುತ್ತದೆ. ಓಸೀಆರ್ ತಂತ್ರಜ್ಞಾನದ ಬಗ್ಗೆ ಮುಂದಿನ ದಿನಗಳಲ್ಲಿ ಒಂದು ವಿಸ್ತೃತ ಬರಹವನ್ನೇ ಬರೆಯುತ್ತೇನೆ. ಅಷ್ಟರೊಳಗೆ ನೀವೇ ಇದರ ಬಗ್ಗೆ ಹುಡುಕುವ ಪ್ರಯತ್ನ ಮಾಡಿ. ಈ ವಿಷಯದಲ್ಲಿ ನಿಮ್ಮ ಕುತೂಹಲವನ್ನು ಸ್ವಲ್ಪ ಉಳಿಸುವ ಆಸೆ ನನ್ನದು.

ಇದೆಲ್ಲದರೊಟ್ಟಿಗೆ ನಾನು ಬೇಳೂರು ಸುದರ್ಶನ ಅವರಿಗೆ ಹೃತ್ಪೂರ್ವಕ ವಂದನೆಗಳನ್ನರ್ಪಿಸಲು ಬಯಸುತ್ತೇನೆ. ಏಕೆಂದರೆ ಇವರು ನನಗೆ ಕನ್ನಡದ ಓಸೀಆರ್ ತಂತ್ರಜ್ಞಾನಕ್ಕೆ ಕೆಲಸ ಮಾಡುತ್ತಿರುವ ಮೈಸೂರಿನ ಯೋಗಾನಂದ ಅವರನ್ನು ಪರಿಚಯಿಸಿದರು. ಯೋಗಾನಂದರವರು ಇನ್ನೂ ಅನೇಕ ಪುಸ್ತಕಗಳನ್ನು ನನ್ನ ಹಾಗು ಎಲ್ಲರ ವಿಶೇಷವಾಗಿ ಎಲ್ಲಾ ಅಂಧರ ಅನುಕೂಲಕ್ಕಾಗಿ Electronic book ರೂಪಕ್ಕೆ ಪರಿವರ್ತಿಸಿಕೊಡುವ ಭರವಸೆನೀಡಿದ್ದಾರೆ. ಕಣಜ ಜಾಲತಾಣದ ಸಮನ್ವಯಕಾರರಾಗಿರುವ ಬೇಳೂರು ಸುದರ್ಶನ ಅವರ ಬಗ್ಗೆಹಾಗು ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಆಗಿರುವ ಕನ್ನಡ ಓಸೀಆರ್ ತಂತ್ರಜ್ಞಾನವನ್ನು ತಯಾರಿಸುತ್ತಿರುವ ಯೋಗಾನಂದ ಅವರುಗಳ ಬಗ್ಗೆ ಮುಂದೊಂದು ದಿನ ಖಂಡಿತಾ ಬರೆಯುತ್ತೇನೆ. ಈಗ ಸಮಯ ಬಹಳವಾಯಿತು. ಇತ್ತೀಚೆಗೆ ಮೊದಲಿನಂತೆ ಬೇಕಾದಷ್ಟು ಸಮಯ ನನಗೆ ಸಿಗುತ್ತಿಲ್ಲ. ಬೇರೆ ಬೇರೆ ಕೆಲಸಗಳಲ್ಲಿ ಹಾಗೂ ಉನ್ನತ ವಿದ್ಯಾಭ್ಯಾಸಗಳಲ್ಲಿ ತೊಡಗಿದ್ದೇನೆ. ಅವನ್ನೂ ಶೀಘ್ರದಲ್ಲಿ ಬರೆಯುತ್ತೇನೆ.

Wednesday, March 23, 2011

ಒಂದು ಸ್ಪಷ್ಟೀಕರಣ

ಈ ಲೇಖನವನ್ನು ಬರೆಯುತ್ತಿರುವ ಉದ್ದೇಶವೆಂದರೆ, ಪತ್ರಿಕೆಯ್ಒಂದರಲ್ಲಿ ಪ್ರಕಟವಾದ ನನ್ನ ಒಂದು ಅಭಿಪ್ರಾಯದ ಬಗ್ಗೆ ಕೆಲವರಿಗಿದ್ದ ಗೊಂದಲಗಳೂ ಮತ್ತು ಅನುಮಾನಗಳನ್ನು ಪರಿಹರಿಸಲು ಪ್ರಯತ್ನಿಸುವುದು.

೧೭/೦೩/೨೦೧೧ರಂದುನಮ್ಮ ಮನೆಗೆ ಪತ್ರಕರ್ತರು ಬಂದಿದ್ದರು. ಅವರು ಕನ್ನಡ ಓದಬಲ್ಲ ಈಸ್ಪೀಕ್ ತಂತ್ರಾಂಶದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಲು ನನ್ನ ಸಂದರ್ಶನ ಪಡೆದರು. ಸಂದರ್ಶನ ಮುಗಿದ ಮೇಲೆ ನಾನು ಮತ್ತು ಅವರು ಸ್ವಲ್ಪ ಹೊತ್ತು ಸುಮ್ಮನೆ ಲೋಕಾಭಿರಾಮ ಮಾತನಾಡುತ್ತಿದ್ದೆವು.
ಆ ಸಂದರ್ಬದಲ್ಲಿ ಬೇರೆ ಬೇರೆ ವಿಚಾರಗಳನ್ನೂ ನನ್ನ ಜೊತೆ ಚರ್ಚಿಸಿದರು. ಆಗ ತಾನೆ ಮುಗಿದಿದ್ದ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆಯೂ ಕೇಳಿದರು. ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಧ್ಯಮಗಳಲ್ಲಿ ಕೇಳಿ ತಿಳಿದುಕೊಂಡ ನಾನು ಸಹಜವಾಗಿಯೇ ಸ್ವಲ್ಪ ಅಸಮಧಾನಗೊಂಡಿದ್ದೆ. ಅವರಿಗೆ ನಾನು ‘ಒಂದು ಭಾಷೆ ಬೆಳೆಯಲು ಅದನ್ನು ಜ್ಞಾನದಿಂದ ತುಂಬಬೇಕೇ ಹೊರತು ಸಮ್ಮೇಳನಗಳಿಂದಲ್ಲ. ಸಮ್ಮೇಳನಗಳನ್ನು ಮಾಡಲು ದುಡ್ಡು ಹಾಕುವ ಬದಲು ಕನ್ನಡ ಪುಸ್ತಕಗಳಿಗೆ ಸಹಾಯ ಧನ ನೀಡಬಹುದಿತ್ತು. ಇಂಗ್ಲೀಶ್ ಆಗಲಿ, ಮತ್ತಿತರೇ ವೇಗದಿಂದ ಬೆಳೆಯುತ್ತಿರುವ ಭಾಷೆಗಳಿಗೇನು ಸಮ್ಮೇಳನ ಮಾಡುತ್ತಾರಾ?‘ ಎಂದು ಕೇಳಿದ್ದೆ. ಇದರ ಬಗ್ಗೆಯೂ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದರ ಅರ್ಥ ನಾನು ಸಮ್ಮೇಳನಗಳ ವಿರೋದಿ ಅಲ್ಲ. ಆದರೆ ಭಾಷೆಯನ್ನು ಬೆಳೆಸುವುದು ಮುಖ್ಯ. ಇದು ಸಮ್ಮೇಳನಗಳಿಂದ ಮಾತ್ರ ಸಾದ್ಯ ಎಂಬ ಕಲ್ಪನೆ ತಪ್ಪು ಎಂದು ಹೇಳಿದೆ ಅಷ್ಟೇ. . ಅಲ್ಲದೇ ಸಾಹಿತ್ಯ ಸಮ್ಮೇಳನ ನಡೆದು ಎರಡೇ ತಿಂಗಳೊಳಗೆ ವಿಶ್ವ ಕನ್ನಡ ಸಮ್ಮೇಳನದ ಅಗತ್ಯ ಏನಿತ್ತು? ಇರಲಿ, ನನ್ನ ವಿಚಾರ ಇಷ್ಟೇ; ಒಂದು ಭಾಷೆ ಬೆಳೆಯಲು ಅದು ಜ್ಞಾನದಿಂದ ಶ್ರೀಮಂತವಾಗಿರಬೇಕು ಮತ್ತೂ ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನವಿರಬೇಕು. ಯಾವುದೋ ಒಂದು ಉದ್ದೇಶವನ್ನು ಈಡೇರಿಸಿಕೊಳ್ಳಲು ಒಂದು ಭಾಷೆಯನ್ನು ಬಳಸಿಕೊಳ್ಳಬಾರದು. ಆಗ ಮಾತ್ರಾ ಅದು ಬೆಳೆಯಲು ಸಾದ್ಯ. ನಾನು ಈ ಲೇಖನವನ್ನು ಬರೆದ ಉದ್ದೇಶವೇನೆಂದರೆ, ಕೆಲವರು ಮೇಲೆ ಹೇಳಿದ ನನ್ನ ನಿಲುವನ್ನು ಠೀಕಿಸಿದ್ದರು, ಹಾಗು ನನ್ನನ್ನು ಸಮ್ಮೇಳನಗಳ ವಿರೋಧಿ ಎಂದೂ ಕರೆದರು. ಇದು ನನ್ನ ಮನಸ್ಸಿಗೆ ಕೊಂಚ ನೋವುಂಟು ಮಾಡಿರುವುದು ಸತ್ಯ; ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಲೂ ನಾನು ಹೇಳುವ ಮಾತು ಇಷ್ಟೇ, ನಮ್ಮ ಭಾಷೆಯಲ್ಲಿ ಹೆಚ್ಚು ಹೆಚ್ಚು ಜ್ಞಾನ ಬಂಡಾರವನ್ನು ತೆರೆದಿಡುವ ಪ್ರಯತ್ನ ನಡೆಯಬೇಕಾಗಿದೆ.. ಇದಕ್ಕೆ ಯಾರಿಗಾದರೂ ನಾನು ಸಹಾಯ ಮಾಡಬಹುದಾದರೆ ನಾನು ಧನ್ಯ. ಈಗ ನಾನು ಕೆಲವು ಸಣ್ಣ ಪುಟ್ಟ ಇಂಗ್ಲೀಶ್ ಕಥೆಗಳನ್ನು ಅನುವಾದಿಸಲು ಪ್ರಯತ್ನ ಪಡುತ್ತಿದ್ದೇನೆ. ಆದರೆ ಇದು ಇನ್ನೂ ಆರಂಭ ಅಷ್ಟೇ. ಮುಂದೆ ಕೆಲವು ಲೇಖನಗಳನ್ನೂ ಅನುವಾದ ಮಾಡುವ ಆಸೆ ಇದೆ. ಈ ಬಗ್ಗೆ ನಿಮಗೆ ಆಸಕ್ತಿ ಇದ್ದರೆ ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಹೇಳಿದ ಈ ಮೇಲಿನ ಅಂಶಗಳು ಯಾರಲ್ಲಿ ಏನು ಅಭಿಪ್ರಾಯವನ್ನು ಉಂಟುಮಾಡಿದರೂ ಅದಕ್ಕೆ ನಾನು ಹೊಣೆಯಲ್ಲ. ಆದರೆ ನನ್ನ ಅಭಿಪ್ರಾಯ ಅಚಲ. ಇದು ಅಹಂಕಾರದ ಮಾತಲ್ಲ, ಇದು ಒಬ್ಬ ಸಾಮಾನ್ಯ ಕನ್ನಡಿಗನ ಕಳಕಳಿಯ ಮಾತು.

ನಿಮ್ಮವ, ಶ್ರೀಧರ್ ಟೀ ಎಸ್.

Tuesday, March 15, 2011

ನಾನು ಮತ್ತು ನನ್ನ ಅಂಧತ್ವ.

Dear all here I tried to tell about me and my blindness in my mother tongue kannada. Here I have given an introduction about me, my education, and the factors which influenced my life. I also told about my nature of extra criticism of the things which I don't like.

ನಾನು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಅಬಸಿ ಎಂಬ ಹಳ್ಳಿಯೊಂದರ ಮಧ್ಯಮ ವರ್ಗದ ಕುಟುಂಬದವನು. ನಾನು ಹುಟ್ಟಿದ ಮೂರು-ನಾಲ್ಕು ತಿಂಗಳುಗಳ ಕಾಲ ನನ್ನ ಅಂಧತ್ವ ನನ್ನ ತಂದೆ ತಾಯಿಯರಿಗೆ ಗೊತ್ತಾಗಲೇ ಇಲ್ಲ. ಆದರೆ ಸತ್ಯ ಎಷ್ಟು ದಿನ ಹೊರ ಬರದೇ ಹಾಗೆಯೇ ಇರುತ್ತದೆ? ಒಂದು ದಿನ ಯಾವುದೋ ಕಾರಣಕ್ಕೆ ಅನುಮಾನ ಬಂದು ನನ್ನನ್ನು ಕಣ್ಣಿನ ವೈಧ್ಯರ ಬಳಿಗೆ ಕರೆದೊಯ್ದಾಗ ನನಗಿದ್ದ ದೃಷ್ಟಿ ದೋಶದ ಬಗೆಗೆ ಅವರಿಗೆ ತಿಳಿಯಿತು. ಆಗ ಆ ಕಣ್ಣಿನ ವೈಧ್ಯರು ನನ್ನ ದೃಷ್ಟಿ ತೀರಾ ದುರ್ಬಲವಾಗಿದೆ ಎಂದು ಒಂದು ಕನ್ನಡಕ ಕೊಟ್ಟರು. ಆದರೆ ನನಗೆ ತಿಳಿದ ಮಟ್ಟಿಗೆ ಅದು ಉಪಯೋಗವಾಗಲಿಲ್ಲ. ಅಂದರೆ ನನಗೆ ತಿಳಿದಂತೆ ನಾನು ಸ್ವಲ್ಪ ಬೆಳಕನ್ನು ಬಿಟ್ಟರೆ ಇನ್ನೇನನ್ನು ನೋಡಿಲ್ಲ. ಆ ಕಾಲದಲ್ಲಿ ನನ್ನ ಪೋಷಕರಿಗೆ ಅಂಧರಬಗ್ಗೆ ಹಾಗು ಅವರ ಶಿಕ್ಷಣದಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಆ ಸಮಯದಲ್ಲಿ ಅವರು ನನ್ನನ್ನು ಕರೆದುಕೊಂಡು ಅನೇಕ ವೈಧ್ಯರ ಬಳಿ ಅಲೆದಾಡಿದರು. ಅಲೋಪತಿ, ಆಯುರ್‌ವೇದ, ಹೋಮಿಯೋಪತಿ ಹೀಗೆ ಕಂಡ ಕಂಡ ವೈಧ್ಯಕೀಯ ಪದ್ಧತಿಯನ್ನು ನಂಬಿಕೊಂಡು ಆಯಾ ಪದ್ಧತಿಗಳ ವೈಧ್ಯರ ಬಳಿಗೆ ನನ್ನನ್ನು ಕರೆದುಕೊಂಡು ಹೋದರು. ಆದರೆ ದುರದೃಷ್ಟವಶಾತ್ ಯಾವುದೇ ಪ್ರಯೋಜನವಾಗಲಿಲ್ಲ. ಈ ಮಧ್ಯದಲ್ಲಿ ನನಗೆ ಆರು ವರ್ಷ ತುಂಬುವ ಹೊತ್ತಿಗೆ ನಮ್ಮ ಊರಿನ ಬಳಿಯಲ್ಲೇ ಸಿದ್ಧಾಪುರ ಎಂಬಲ್ಲಿ ಅಂಧರಿಗಾಗಿಯೇ ಒಂದು ಶಾಲೆ ಪ್ರಾರಂಭವಾಯಿತು. ಆ ಶಾಲೆಗೆ ನಾನೇ ಮೊದಲ ವಿದ್ಯಾರ್ಥಿ. ಅಲ್ಲಿ ನಾನು ಬ್ರೈಲ್ ಎಂಬ ಅಂಧರಿಗಾಗಿಯೇ ಇರುವ ವಿಶೇಷ ಲಿಪಿಯಲ್ಲಿ ನನ್ನ ಶಿಕ್ಷಣವನ್ನು ಆರಂಭಿಸಿದೆ. ಈ ಹಂತದಲ್ಲಿ ನನಗೆ ನಾನು ಬೇರೆಯವರಿಗಿಂತ ವಿಭಿನ್ನವಾದ ಪದ್ಧತಿಯಲ್ಲಿ ಕಲಿಯುತ್ತಿರುವುದು ಅರಿವಿಗೆ ಬಂತು. ನಾನು ಶಾಲೆಯ ಬಗ್ಗೆ ನನ್ನದೇ ಆದ ಕೆಲವು ಕಲ್ಪನೆಗಳನ್ನು ಹೊಂದಿದ್ದೆ. ಏಕೆಂದರೆ ನಾನು ಸುಮಾರು ನಾಲ್ಕೈದು ವರ್ಷದವನಾಗಿದ್ದಾಗಿನಿಂದಲು ನನ್ನ ದೊಡ್ಡಪ್ಪನ ಮಗಳು ಅಂದರೆ ನನ್ನ ಅಕ್ಕನ ಶಾಲೆಗೆ ಆಗಾಗ ಹೋಗುತ್ತಿದ್ದೆ. ಆದರೆ ಆ ಶಾಲೆಯ ವಾತಾವರ್ಣ ಮತ್ತು ಈ ಶಾಲೆಯ ವಾತಾವರ್ಣಗಳು ಬೇರೆ ಬೇರೆಯಾಗಿದ್ದಿದ್ದು ನನ್ನ ಆ ಪುಟ್ಟ ಮನಸ್ಸಿಗೂ ಅರಿವಿಗೆ ಬಂತು. ಬಹುಶಹ ನಾನು ಈಗಿನಷ್ಟು ದೊಡ್ಡವನಾಗಿದ್ದರೆ ನನ್ನ ಅಪ್ಪನನ್ನು ಕೇಳುತ್ತಿದ್ದೆನೋ ಏನೋ! ಗೊತ್ತಿಲ್ಲ. ಆದರೆ ಅಲ್ಲಿನ ಶಿಕ್ಷಣಕ್ಕೆ ನಾನು ಹೊಂದಿಕೊಂಡು ನಾನೂ ಬ್ರೈಲ್ ಕಲಿಯತೊಡಗಿದೆ. ನನ್ನ ಮನಸ್ಸು ಪ್ರೌಢವಾಗುವ ಹೊತ್ತಿಗಾಗಲೆ ನನಗೆ ಅರಿವಿಲ್ಲದಂತೆ ನನಗೆ ಆತ್ಮವಿಶ್ವಾಸ ಬಂದು ಬಿಟ್ಟಿತ್ತು. ಬಹುಶಹಾ ಇದಕ್ಕೆ ನನ್ನ ಮನೆಯವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣರೇ!

ನಾನು ಓದುತ್ತಿದ್ದ ಸಮಯದಲ್ಲಿ ನನಗೆ ಬೇಕಾದ ಪುಸ್ತಕಗಳು ಬ್ರೈಲ್ ಲಿಪಿಯಲ್ಲಿ ಲಭ್ಯವಿರಲಿಲ್ಲ. ಆ ಸಮಯದಲ್ಲಿ ನನ್ನ ಅಜ್ಜನಿಂದ ಹಿಡಿದು ನಮ್ಮ ಮನೆಯ ಎಲ್ಲರೂ ನನಗೆ ಓದಿ ಹೇಳಿ ತುಂಬಾ ಸಹಾಯ ಮಾಡಿದರು. ಅವರೆಲ್ಲರ ನೆರವಿನ್ಇಂದ ಮತ್ತು ನನ್ನ ಗುರುಗಳ ಮಾರ್ಗದರ್ಶನದಿಂದ ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸಿದ್ಧಾಪುರದಲ್ಲಿ ಮುಗಿಸಿದೆ. ನಂತರ ಮುಂದಿನ ವಿದ್ಯಾಭ್ಯಾಸವನ್ನು ಚಿಕ್ಕಮಗಳೂರಿನ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಮುಗಿಸಿದೆ. ನಾನು ೧೦ನೆ ತರಗತಿ ಮುಗಿಸುವ ಹೊತ್ತಿಗೆ ನನಗೆ ಕಂಪ್ಯೂಟರಿನ ಬಗ್ಗೆ ಮತ್ತು ಅದನ್ನು ಅಂಧರು ಹೇಗೆ ಬಳಸುತ್ತಾರೆಂಬ ಬಗ್ಗೆ ತಿಳಿಯಿತು. ಕಂಪ್ಯೂಟರಿನಲ್ಲೇ ನನ್ನ ಶಿಕ್ಶಣ ಮುಂದುವರಿಸುವುದಾಗಿ ತೀರ್ಮಾನಿಸಿ ಮೈಸೂರಿನ ಜೆ.ಜೆ.ಎಸ್. ಪಾಲಿಟೆಕ್ನಿಕ್ ಫಾರ್ ಫಿಜಿಕಲಿ ಹ್ಯಾಂಡೀಕ್ಯಾಪ್‌ಡ್ ಸೇರಿದೆ. ಅಲ್ಲಿ ನನ್ನ ಕಂಪ್ಯೂಟರ್ ಡಿಪ್ಲೊಮಾವನ್ನು ಪೂರೈಸಿ ಮೆಡಿಕಲ್ ಟ್ರಾನ್ಸ್ಕ್ರಿಪ್ಶನಿಷ್ಟ್‌ಆಗಿ ಸ್ವಲ್ಪ ದಿನ ಕೆಲಸ ಮಾಡಿದೆ. ಈಗ ಅದೆಲ್ಲವನ್ನೂ ಬಿಟ್ಟು ಈಸ್ಪೀಕ್ ಎಂಬ ಟಿ.ಟಿ.ಎಸ್ ತಂತ್ರಾಂಶದಲ್ಲಿ ಕನ್ನಡ ಭಾಷೆಯನ್ನು ಸೇರಿಸುವಲ್ಲಿ ಕೆಲಸ ಮಾಡುತ್ತಿದ್ದೇನೆ.

ನನ್ನ ಪ್ರಾಥಮಿಕ ಶಿಕ್ಶಣದ ಸಮಯದಲ್ಲಿ ನನ್ನ ಮನೆಯಲ್ಲಿ ನನಗೆ ಕೆಲವು ಮಹಾತ್ಮರ ಜೀವನ ಚರಿತ್ರೆಗಳು ಮತ್ತು ರಾಮಾಯಣ, ಮಹಾಭಾರತದಂತಹ ಪುರಾಣಗಳನ್ನೂ ಮತ್ತು ಕೆಲವು ಪತ್ರಿಕೆಗಳಲ್ಲಿ ಬರುವ ಲೇಖನಗಳನ್ನೂ ಓದಿ ಹೇಳುತ್ತಿದ್ದರು. ಅಲ್ಲದೇ ಟೀವೀ ಮತ್ತು ರೇಡಿಯೋಗಳನ್ನು ಕೇಳುತ್ತಿದ್ದೆ. ಇವುಗಳಿಂದಾಗಿ ನನ್ನ ಸಾಮಾನ್ಯ ಜ್ಞಾನ ಮತ್ತು ವೈಚಾರಿಕತೆ ಬೆಳೆಯಿತು. ಈ ಮದ್ಯೆ ನಾನು ಕಂಪ್ಯೂಟರ್ ಕಲಿತೆ. ಇದು ಮಹಾ ಜ್ಞಾನಭಂಡಾರವನ್ನೇ ನನ್ನ ಮುಂದೆ ತೆರೆದಿಟ್ಟಿತು. ಆದರೆ ನಾನು ಕನ್ನಡದಲ್ಲಿರುವ ಪಠ್ಯವನ್ನು ಕಂಪ್ಯೂಟರಿನ ಸಹಾಯದಿಂದ ಓದಲಾಗುತ್ತಿರಲಿಲ್ಲ. ಏಕೆಂದರೆ ನಾನು ಅಂಧನಾಗಿರುವುದರಿಂದ ಕಂಪ್ಯೂಟರಿನ್ಅ ಪರದೆಯ ಮೇಲೆ ಮೂಡುವ ಅಕ್ಶರಗಳನ್ನು ಧ್ವನಿ ರೂಪಕ್ಕೆ ಬದಲಾಯಿಸುವ ವಿಶೇಶ ತಂತ್ರಾಂಶದ ನೆರವು ಬೇಕಾಗುತ್ತದೆ. ಆದರೆ ಈ ವರೆಗೆ ಅಂತಹಾ ತಂತ್ರಾಂಶವು ಇಂಗ್ಲೀಶ್‌ನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಅದು ಕನ್ನಡಕ್ಕೂ ಲಭ್ಯವಿದೆ. ಇದನ್ನು ಕನ್ನಡಕ್ಕೆ ತರುವಲ್ಲಿ ನಾನು ಕೆಲಸ ಮಾಡಿದ್ದೇನೆ. ಆ ಬಗ್ಗೆ ಬೇರೆ ಯಾವಾಗಲಾದರೂ ಮಾತನಾಡೋಣ. ಇದರಿಂದಾಗಿ ಸಹಜವಾಗಿಯೇ ನಾನು ಎಲ್ಲವನ್ನು ಪ್ರಶ್ನೆ ಮಾಡತೊಡಗಿದೆ ಮತ್ತು ನನ್ನ ಮನಸ್ಸಿಗೆ ಸರಿ ಎನಿಸದ ವಸ್ತು ಮತ್ತು ವಿಚಾರಗಳನ್ನು ಠೀಕೆ ಮಾಡತೊಡಗಿದೆ. ಅದು ಈಗಲೂ ಹಾಗೆಯೇ ಮುಂದುವರಿದಿದೆ! ಬಹುಶಹಾ ಅಗತ್ಯಕಿಂತ ಸ್ವಲ್ಪ ಜಾಸ್ತಿ ಠೀಕಿಸಿಬಿಟ್ಟೆ ಎಂದೂ ಕೆಲವೊಮ್ಮೆ ನನ್ನ ಮನಸ್ಸಿಗೆ ಅನಿಸಿದ್ದುಂಟು. ಆದರೆ ಆಡಿದ ಮಾತನ್ನು ಹಿಂಪಡೆಯಲು ನಾನೇನು ರಾಜಕಾರಣಿಯೇ?!

ನನಗೆ ನನ್ನ ಶಾಲೆ ಮತ್ತು ಕಾಲೇಜಿನ ಅನುಭವಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ, ಆದರೆ ಇವತ್ತಿಗೆ ಇಷ್ಟು ಸಾಕು. ಇಲ್ಲದ್ದಿದ್ದರೆ ಓದುತ್ತಿರುವ ನಿಮಗೆ ಮಾಹಿತಿಯ ಅಜೀರ್ಣ ಸಮಸ್ಯೆಯಾಗಬಹುದು! ಅಲ್ಲವೇ?

ಇಲ್ಲಿ ಹೇಳಿದ ಈಸ್ಪೀಕ್‌ನ ಬಗ್ಗೆ ಒಂದು ಆರ್ಟಿಕಲ್ ಈ ಬ್ಲಾಗ್‌ನಲ್ಲಿಯೇ ಬರೆದಿದ್ದೇನೆ ದಯವಿಟ್ಟು ಅದನ್ನು ನೋಡಿ.

In this article I focused on my education, but not in depth. I also have given information about Kannada TTS called eSpeak which was developed by mr. Jonathan duddington, A person from UK. He has included more than 70 languages in eSpeak. Kannada is also one amongst them. apart from that around 5-6 Indian languages are also available in that. For more information about eSpeak, please refer to an article regarding using Indian languages with NVDA and eSpeak.